Thursday 11 August 2016

ನನ್ನ ಪ್ರಕಾರ ’ಓದುವಿಕೆ’ ಅಂದರೆ, ನಾಲ್ಕು ನೂರು ಪುಟಗಳ ಕಾದಂಬರಿಯೊಂದನ್ನು ಓದುಗನೊಬ್ಬ, ಲೇಖಕ ಆ ಕೃತಿ ಬರೆಯುವಾಗ ತೋರಿದ ನಿಷ್ಠೆ ಪ್ರಾಮಾಣಿಕತೆಗಳನ್ನು ಬದಿಗೊತ್ತಿ, ತನಗೆ ಸರಿಕಂಡ ಕ್ರಮಗಳಲ್ಲಿ ಗ್ರಹಿಸುತ್ತಾ ಹೋಗಿ, ಕಡೆಗೆ ಲೇಖಕನನ್ನು ಮೀರಿ ತನ್ನ ಓದಿನ ಗ್ರಹಿಕೆಯನ್ನು ವಿಸ್ತರಿಸಿಕೊಳ್ಳುವ ರೀತಿ. ಇಲ್ಲಿ ಎಲ್ಲ ಲೇಖಕರಿಗೂ ಗಂಭೀರ ಕಾವ್ಯ, ಕತೆ, ಕಾದಂಬರಿಗಳನ್ನು ಬರೆಯಲು ಸಾಧ್ಯವಾಗದಿರಬಹುದು; ಆದರೆ ಯಾರೂ ಗಂಭೀರ ಓದುಗರಾಗಬಹುದು. ಸಿನಿಮಾದಲ್ಲಿ ಈ ಅವಕಾಶಗಳಿಲ್ಲ. ನಾಲ್ಕು ನೂರು ಪುಟಗಳ ಸಾಹಿತ್ಯ ಕೃತಿಯೊಂದನ್ನು ಓದುವಾಗ ಖರ್ಚು ಮಾಡಿದ ಒಂದು ಪಾಲಿನ ಶ್ರಮದಷ್ಟು ಸಿನಿಮಾ ಎಂಬ ಇನ್ಸ್‌ಟಂಟ್ ಫುಡ್ ಮೇಲೆ ಓದುಗನೊಬ್ಬ ಖರ್ಚು ಮಾಡಿದರೆ ಸಾಕು; ನಾಲ್ಕು ನೂರು ಪುಟಗಳ ಸಾಹಿತ್ಯ ಕೃತಿಯನ್ನು ಎರಡು, ಎರಡೂವರೆ ಗಂಟೆಗಳಲ್ಲಿ ತಿಂದು ಮುಗಿಸಬಹುದು! ಜೀರ್ಣಿಸಿಕೊಳ್ಳುವುದು ಆಮೇಲಿನ ಮಾತು. ಕನ್ನಡ ಸಿನಿಮಾಗಳ ಐವತ್ತು, ನೂರು ದಿನಗಳ ವಾಲ್ಪೋಸ್ಟರ್ಗಳನ್ನು ರಸ್ತೆಬದಿ ಕಂಡಾಗ ಮಾತ್ರ ಸಿನಿಮಾ ನೋಡುವ ಸಾಹಸಕ್ಕೆ ಕೈಹಾಕುವ ನನ್ನಂಥವರಿಗೆ ಕನ್ನಡ ಸಿನಿಮಾಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಯಾವ ಮೂಲೆಯಲ್ಲೂ ತಯಾರಾಗದ, ಮತ್ತಿನ್ನ್ಯಾರೂ ತಯಾರು ಮಾಡಲಿಕ್ಕಾಗದ ಕಳಪೆ ದರ್ಜೆ ಸಿನಿಮಾಗಳು; ಮನುಷ್ಯರು ನೋಡಲಿಕ್ಕಾಗದ ಸಿನಿಮಾಗಳು; ಪ್ರೇಕ್ಷಕರನ್ನು ಲೆಕ್ಕಕ್ಕಿಡದೆ ಕೇವಲ ಪ್ರಶಸ್ತಿಗಾಗಿ ತಯಾರಾಗುವ ಸಿನಿಮಾಗಳು; ಸಿನಿಮಾದ ಅಸಲಿ ಗಂಧಗಾಳಿ ಗೊತ್ತಿಲ್ಲದವರು ನಿರ್ದೇಶಿಸುವ ಸಿನಿಮಾಗಳು; ತಯಾರಿಕೆಗೆ ಬೇಕಾದ ಕನಿಷ್ಠ ಪ್ರಾಥಮಿಕ ವ್ಯಾಕರಣ ಗೊತ್ತಿಲ್ಲದವರು ನಿರ್ಮಿಸುವ ಸಿನಿಮಾಗಳು; ಗಲ್ಲು ಶಿಕ್ಷೆಗೆ ಒಳಪಟ್ಟ ಕೈದಿಯೊಬ್ಬ ಈ ಸಿನಿಮಾಗಳಿಗಿಂತ ಗಲ್ಲು ಶಿಕ್ಷೆಯೇ ವಾಸಿ ಎನಿಸುವಂತೆ ಮಾಡಿದ ಸಿನಿಮಾಗಳು… ಇಲ್ಲಿ, ಅಂದರೆ ಅಖಂಡ ಕರ್ನಾಟಕ ರಾಜ್ಯದ ಕನ್ನಡ ಭಾಷೆಯಲ್ಲಿ ಮಾತ್ರ ರೂಪುಗೊಳ್ಳುತ್ತವೆ ಎಂಬುದು ನನ್ನ ಗ್ರಹಿಕೆ. ಈ ಬಗೆಯ ಸಿನಿಮಾಗಳನ್ನು ನೋಡಲು ಬರೀ ಕಣ್ಣಿದ್ದರೆ ಸಾಲದು; ನೋಡುವ ಎದೆಗಾರಿಕೆಯೂ ಬೇಕು! ಕಮರ್ಷಿಯಲ್ / ಕಲಾತ್ಮಕ ಅನ್ನದೆ ಅತಿ ಕಡಿಮೆ ಒಳ್ಳೆಯ ಚಿತ್ರಗಳನ್ನು ಅತಿ ಕೆಟ್ಟ ಮತ್ತು ಭೀಕರ ಪರಿಣಾಮಗಳೊಂದಿಗೆ ತಯಾರಿಸುವ ಖ್ಯಾತಿ ಸದ್ಯಕ್ಕೀಗ ಕನ್ನಡ ಚಿತ್ರರಂಗಕ್ಕಿದೆ. ನೆರೆಯ ತಮಿಳು, ತೆಲುಗು, ಮಲಯಾಳಂ ಚಿತ್ರೋದ್ಯಮಗಳು ಕಾಲಕಾಲಕ್ಕೆ ಸಿನಿಮಾದ ಕಥೆ, ಚಿತ್ರಕಥೆ, ವಸ್ತು, ನಿರೂಪಣೆ, ತಂತ್ರಗಾರಿಕೆಯನ್ನು ಅಪ್‌ಡೇಟ್ ಮಾಡಿಕೊಂಡು ಹೋಗುತ್ತಿರುವಾಗ, ಇಲ್ಲಿನವರು -ಅಂದರೆ ಗಾಂಧಿನಗರದ ಇಂಗುಮರ್ರು ಬರ್ಗ್‌ಮನ್ನುಗಳು, ಅಕಿರೋ ಕುರ್ರಸೋವಾಗಳು- ತಮಿಳು ತೆಲುಗು ಮಲಯಾಳಂನವರ ಎಂಜಲನ್ನು ಪವಿತ್ರ ತೀರ್ಥ ಪ್ರಸಾದಗಳಂತೆ ಸ್ವೀಕರಿಸುತ್ತಿರುವ ದೃಶ್ಯಗಳನ್ನು ನೋಡಲು 70 ಎಂ.ಎಂ ಪರದೆಯೇ ಬೇಕಿಲ್ಲ. ಕನ್ನಡ ಸಿನಿಮಾದ ಸದ್ಯದ ಸಾಧ್ಯತೆ ಸವಾಲುಗಳ ಕುರಿತು ಹೇಳುವಾಗ, ಮೇಲಿನ ಮಾತುಗಳನ್ನು ಕನ್ನಡ ಸಿನಿಮಾ ರಂಗ ವರ್ತಮಾನದಲ್ಲಿ ತಲುಪಿರುವ ಹೀನಾಯ ಸ್ಥಿತಿಗೆ ಪೀಠಿಕೆಯಾಗಿ ಹೇಳಬೇಕಾಯಿತು. ಜಾಗತಿಕ ಸಿನಿಮಾ ರಂಗದಲ್ಲಿ ದೊಡ್ಡ ಮಾರುಕಟ್ಟೆಯೇನೂ ಕನ್ನಡ ಚಿತ್ರಗಳಿಗಿಲ್ಲ. ಕೋಲಾರ, ಬಳ್ಳಾರಿ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಸಿನಿಮಾಗಳನ್ನು ಸಿನಿಮಾ ಮಂದಿರಗಳಲ್ಲಿ ಬಿಟ್ಟಿ ತೋರಿಸಿದರೂ ಜನ ಅತ್ತ ಕಡೆ ತಲೆ ಹಾಕುವುದಿಲ್ಲ. ಯಾಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಗಾಂಧಿನಗರದ ಖಾಲಿ ತಲೆಗಳಿಗೆ ಪುರುಸೊತ್ತಿಲ್ಲ. ರೈತರಿಗೆ, ಶ್ರಮಿಕ ವರ್ಗಕ್ಕೆ, ಕೂಲಿ ಕಾರ್ಮಿಕರಿಗೆ ಸಿಗದ ಸಬ್ಸಿಡಿಗಳು, ಸವಲತ್ತುಗಳು ಈ ಸಿನಿಮಾದವರಿಗೆ ಸಿಗುತ್ತಿವೆ. ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಯನ್ನು ನಾವು ಸಿನಿಮಾಗಳ ಮೂಲಕ ಎತ್ತಿಹಿಡಿಯುತ್ತಿದ್ದೇವೆ ಎಂದು ಸರ್ಕಾರದ ಸಬ್ಸಿಡಿಗೆ ಅರ್ಜಿ ಹಾಕುವ ಇವರ ಸಿನಿಮಾಗಳನ್ನು ಒಮ್ಮೆ ನೋಡಿದರೆ ಸಾಕು; ಕನ್ನಡ ಭಾಷೆಯನ್ನು, ಪ್ರೇಕ್ಷಕರ ಅಭಿರುಚಿಯನ್ನು ಹೇಗೆಲ್ಲ ಕಲುಷಿತಗೊಳಿಸಬಹುದೆಂಬ ವಿಧಾನಗಳು ಹೊಳೆಯುತ್ತವೆ. ** ಗಡಿ ಪ್ರದೇಶದಲ್ಲಿರುವ ಜನ ಏಕಕಾಲಕ್ಕೆ ಎರಡು ಭಾಷೆಗಳ ಮೇಲೆ ಹಿಡಿತ ಹೊಂದಿರುತ್ತಾರೆ ಎಂಬ ಕನಿಷ್ಠ ಅರಿವು ಗಾಂಧಿನಗರದ ಬಣ್ಣದ ಜನರಿಗೆ ಇದ್ದಂತಿಲ್ಲ. ಗಾಂಧಿನಗರವಿರಲಿ, ಸರ್ಕಾರವೇ ಎರಡು ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಜನರನ್ನು ಪ್ರತಿಭೆಯ ಮಾನದಂಡಗಳಿಂದ ಗುರುತಿಸುವ ಬದಲು ಅದು ಆ ಜನರ ಅಸಹಾಯಕತೆ ಎನ್ನುವಂತೆ ನೋಡುತ್ತಿದೆ. ಈ ಭಾಗದ ಜನರ ನಿಜವಾದ ಸಂಕಟಗಳನ್ನು ಪ್ರತಿನಿಧಿಸುವಂತಹ ಸಿನಿಮಾಗಳಿಗೆ ಗಾಂಧಿನಗರದ ಜನ ಯಾವತ್ತೂ ಕೈಹಾಕಲಾರರು. ಇಂತಹ ಕಡೆಗಳಲ್ಲಿ ಕನ್ನಡ ಚಲನಚಿತ್ರಗಳ ಸಮಾಧಿಯ ಮೇಲೆ ತಮಿಳು, ತೆಲುಗು ಚಿತ್ರಗಳು ಪ್ರಚಂಡ ಜಯಭೇರಿ ಭಾರಿಸುತ್ತವೆ. ಇಲ್ಲಿ ಜಯಭೇರಿ ಅಂದ ಮಾತ್ರಕ್ಕೆ ತಮಿಳು, ತೆಲುಗು ಸಿನಿಮಾಗಳು ಇಲ್ಲಿನವರ ಕಷ್ಟಗಳಿಗೆ ಸ್ಪಂದಿಸುವಂತಹ ಸಿನಿಮಾಗಳನ್ನು ಕೊಡುತ್ತಿವೆ ಎಂದರ್ಥವಲ್ಲ. ಸಿನಿಮಾದಿಂದ ಪಕ್ಕಾ ಮನರಂಜನೆಯನ್ನು ಮಾತ್ರ ನಿರೀಕ್ಷಿಸುವ ಜನರಿಗೆ ನೀವು ಗೋಳನ್ನು ಪ್ರತಿನಿಧಿಸುವ, ಹಿಂಸೆಯನ್ನು ವೈಭವಿಕರಿಸುವ, ಸವಕಲು, ತೆಳು ಕಥೆಗಳನ್ನಿಟ್ಟು ಇದೇ ಸಿನಿಮಾ ಎಂದು ಹೇಳಹೋದರೆ ಅದನ್ನು ಸಿನಿಮಾದ ಕ್ರಮಗಳಲ್ಲಿ ಯಾರೂ ನೋಡುವುದಿಲ್ಲ. ಹೀಗಾಗಿಯೇ ಇಲ್ಲಿ ತರ್ಕಕ್ಕಿಂತ ಮನರಂಜನೆಯನ್ನೇ ಪ್ರಧಾನವಾಗಿರಿಸಿಕೊಂಡಿರುವ ತಮಿಳು, ತೆಲುಗು ಚಿತ್ರಗಳು ಕನ್ನಡವನ್ನು ಹಿಂದಿಕ್ಕಿ ಸದಾ ಗೆಲುವನ್ನು ಕಾಣುತ್ತವೆ. ಕನ್ನಡದಲ್ಲಿ ತಯಾರಾಗುವ ಕಮರ್ಷಿಯಲ್ ಮತ್ತು ಕಲಾತ್ಮಕ ಎಂಬ ಲೇಬಲ್‌ಗಳನ್ನು ಅಂಟಿಸಿಕೊಂಡ ಚಿತ್ರಗಳನ್ನು ಗಮನಿಸಿ. ಕಮರ್ಷಿಯಲ್ ಚಿತ್ರಗಳಲ್ಲಿ ವೇಗ ಇರುತ್ತದೆ ಅನ್ನುವುದನ್ನು ಬಿಟ್ಟರೆ ಸಿನಿಮಾದ ಉಳಿದ ಪ್ರಕಾರಗಳು ಆ ದೇವರಿಗೇ ಪ್ರೀತಿಯಾಗಬೇಕು. ಗಾಂಧಿನಗರದ ಸಿದ್ಧ ಮಾದರಿಯ ಚೌಕಟ್ಟಿನಲ್ಲಿಯೇ ರೂಪುಗೊಳ್ಳುವ ಈ ಕಮರ್ಷಿಯಲ್ ಚಿತ್ರಗಳನ್ನು ಎರಡೂವರೆ ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಕೂತು ನೋಡುವುದು ಹಿಂಸೆ ಎನಿಸಿದರೆ, ಕಲಾತ್ಮಕ ಚಿತ್ರ ನೋಡುವವರು ಸಹನೆಯ ಮೂಟೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಕ್ಯಾಮೆರಾವನ್ನು ಬಸವನ ಹುಳುವಿನ ಹೆಗಲಮೇಲಿಟ್ಟು ಸಿನಿಮಾ ನಿರ್ಮಿಸುವ ಕಲಾತ್ಮಕ ಚಿತ್ರಗಳ ಭೂಪರು, “ನ

No comments:

Post a Comment